ನಿರ್ದೇಶಕ ಓಂ ಸಾಯಿ ಪ್ರಕಾಶ್ ’ಭ್ರಷ್ಟಾಚಾರ’ ಚಿತ್ರಕ್ಕೆ ಮಾತುಗಳ ಭಾಗದ ಚಿತ್ರೀಕರಣವನ್ನು ಮುಗಿಸಿ ೫ ಹಾಡುಗಳಲ್ಲಿ ೨ ಹಾಡನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಿದ್ದಾರೆ. ಮಿಕ್ಕ ೩ ಹಾಡುಗಳು ಹಾಗೂ ಒಂದು ಭರ್ಜರಿ ಸಾಹಸ ಸನ್ನಿವೇಶವನ್ನು ಈ ತಿಂಗಳ ಮಧ್ಯಭಾಗದಲ್ಲಿ ಸಿದ್ಧಪಡಿಸಲಾಗುವುದು ಎಂದು ತಿಳಿಸುತ್ತಾರೆ.
ಇಂದಿನ ಅತಿ ಹೆಚ್ಚು ಚರ್ಚೆಗೊಳಗಾಗಿರುವ ವಿಚಾರ ಎಂದರೆ ’ಭ್ರಷ್ಟಾಚಾರ’. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಎದ್ದಿರುವ ಗಣಿ ಅವ್ಯವಹಾರದ ಜೊತೆಗೆ ಸಾಮಾನ್ಯ ಜನರ ’ಭ್ರಷ್ಟಾಚಾರ’ದ ಮನಸ್ಸುಗಳನ್ನು ಕೂಡ ನಿರ್ದೇಶಕರು ಈ ಚಿತ್ರದಲ್ಲಿ ಪ್ರಸ್ತಾಪಿಸಲಿದ್ದಾರೆ.
ನಿರ್ಮಾಪಕ ನರ್ಗೀಸ್ ಬಾಬು ಅವರ ಪುತ್ರ ಕಮ್ಮರ್ ಹೆಸರಿನಲ್ಲಿ ರೆಹಾನ್ ಎಂಟರ್ಪ್ರೈಸಸ್ ಬ್ಯಾನರ್ನಲ್ಲಿ ತಯಾರಿಸುತ್ತಿರುವ ಈ ಚಿತ್ರ ಮನಸ್ಸಿನ ಆಂತರ್ಯದಲ್ಲಿ ಬೇರುಬಿಟ್ಟಿರುವ ಭ್ರಷ್ಟಾಚಾರವನ್ನು ಹೊರಹಾಕಲಿದೆ. ಪ್ರಜ್ಞೆ ಹುಟ್ಟಿಸುವುದರ ಜೊತೆಗೆ ಭಯ ಮೂಡಿಸುವ ಕೆಲಸವು ಆಗಬೇಕು ಎಂಬುದು ಈ ಚಿತ್ರದ ಆಶಯ. ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿದಿದ್ದು ಇನ್ನು ಕೆಲವು ಭಾಗದ ಚಿತ್ರೀಕರಣ ಅಷ್ಟೇ ಉಳಿದಿದೆ.
ಕಿಶೋರ್ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಮಾಧುರಿ ಈ ಚಿತ್ರದ ನಾಯಕಿ. ಆದಿ ಲೋಕೇಶ್ ಹಾಗೂ ಇನ್ನಿತರರು ತಾರಾಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ.